ಎ. 2 : ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ – ಸಾಲೆತ್ತೂರು ಶಾಖೆ ಉದ್ಘಾಟನೆ

0

ಬಂಟ್ವಾಳ: ದ.ಕ. ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಹೊಸ ಮೆಲುಗಲ್ಲನ್ನು ಸಾಧಿಸಿದ ಬಂಟ್ವಾಳ ತಾಲೂಕು ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 11ನೇ ಶಾಖೆ ಸಾಲೆತ್ತೂರು ರಥನ್ ಕಾಂಪ್ಲೆಕ್ಸ್‌ನಲ್ಲಿ ಎ. 2 ರವಿವಾರದಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ಒಟ್ಟು 25 ಶಾಖೆಗಳನ್ನು ಸ್ಥಾಪಿಸಿ ಗ್ರಾಹಕರಿಗೆ ವಾಣಿಜ್ಯ ಸೇವೆ ನೀಡುವ ಗುರಿಯೊಂದಿಗೆ ಸಾಗುತ್ತಿರುವ ಸಂಘವು ಇದೀಗ 11ನೇ ಶಾಖೆಯು ಗಣ್ಯರ ಉಪಸ್ಥಿತಿಯಲ್ಲಿ ಶುಭಾರಂಭಗೊಳ್ಳಲಿದೆ.


ಮೂರ್ತೆದಾರಿಕೆ ಕುಲ ಕಸುಬುದಾರರ ಶ್ರೇಯೋಭಿವದ್ಧಿ ಹಾಗೂ ಅವರ ಆರ್ಥಿಕ ಜೀವನ ಮಟ್ಟ ಸುದಾರಿಸುವ ಸಲುವಾಗಿ 1991ರಲ್ಲಿ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಸುಭಾಷ್‌ ನಗರದ ಬ್ರಹ್ಮಶ್ರೀ ನಾರಾಯಣ ಗುರುಮಂದಿರದಲ್ಲಿ ಸಂಘವು ಆರಂಭಗೊಂಡಿತ್ತು. ಸಂಘವು 2005 ನ. 18ರಂದು ಬೊಳ್ಳಾಯಿಯಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಆರಂಭಿಸಿತು. ತಾಲೂಕಿನ ಎಲ್ಲಾ ಭಾಗಗಳಲ್ಲಿರುವ ಮೂರ್ತೆದಾರರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಹಂತ ಹಂತವಾಗಿ ಬೋಳಂತೂರು, ಚೇಳೂರು, ಫಜೀರು, ವಾಮದಪದವು, ಸಿದ್ದಕಟ್ಟೆ, ಅಣ್ಣಳಿಕೆ, ಮಾರ್ನಬೈಲು, ಮಣಿಹಳ್ಳ, ಎನ್.ಸಿ.ರೋಡಿನಲ್ಲಿ ಶಾಖೆಗಳನ್ನು ತೆರೆದು ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಿದೆ. ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಆಭರಣ ಸಾಲ, ಅಡಮಾನ ಸಾಲ, ವಾಹನ ಸಾಲ, ಮೂರ್ತೆದಾರಿಕೆ ಸಾಲ, ವ್ಯಾಪಾರ ಸಾಲ, ವೈಯುಕ್ತಕ ಸಾಲ, ಠೇವಣಾತಿ ಸಾಲ, ಸ್ವಸಹಾಯ ಸಾಲ, ಮಹಿಳೆಯರಿಗೆ ತ್ವರಿತ ಸಾಲ, ಪಿಗ್ಮಿ ಮುಂಗಡ ಸಾಲವನ್ನು ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಮತ್ತು ಸಂಘ ಸಂಸ್ಥೆಗಳ ಠೇವಣಿಗೆ 0.5% ಹೆಚ್ಚುವರಿ ಬಡ್ಡಿ ನೀಡಲಾಗುತ್ತಿದೆ, RTGS/NEFT  ಸೌಲಭ್ಯ ಹಾಗೂ ಸಿದ್ಧಕಟ್ಟೆ ಶಾಖೆಯಲ್ಲಿ ಇ- ಸ್ಟಾಂಪಿಂಗ್ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದೆ.

ಸಂಘವು ಗುರುಶ್ರೀ ಎಂಬ ಹೆಸರಿನಲ್ಲಿ ಸ್ವಸಹಾಯ ಗುಂಪುಗಳನ್ನು ರಚಿಸಿದ್ದು ಸ್ವಸಹಾಯ ಸಂಘದ ಸದಸ್ಯರಿಗೆ ಅತೀ ಕಡಿಮೆ ಅವಧಿಯಲ್ಲಿ ಬ್ಯಾಂಕ್ ಸಾಲವನ್ನು ನೀಡುತ್ತಿದೆ . ಸೇವಾ ಕಾರ್ಯವಾಗಿ ಸಂಘದ ಸದಸ್ಯರಿಗೆ ವಿದ್ಯಾರ್ಥಿ ವೇತನ, ಕಡುಬಡತನದಲ್ಲಿರುವ ಅನಾರೋಗ್ಯ ಪೀಡಿತ ಮೂರ್ತೆದಾರರಿಗೆ ಸಹಾಯ ಧನ ನೀಡಲಾಗುತ್ತಿದೆ. ಪ್ರತೀ ವರ್ಷ ಹಿರಿಯ ಮೂರ್ತೆದಾರರನ್ನು ಗುರುತಿಸಿ ಗೌರವಿಸಲಾಗುತ್ತಿದೆ.


ಕಳೆದ ಸಾಲಿನಲ್ಲಿ ಸಂಘದ ಸದಸ್ಯರಿಗೆ ಶೇ. 25 ಡಿವಿಡೆಂಡ್ ನೀಡಲಾಗಿದೆ. ಪ್ರಸ್ತುತ ಒಟ್ಟು 7297 ಸದಸ್ಯರನ್ನು ಹೊಂದಿದ್ದು, 150 ಕೋಟಿ ರೂ. ವಹಿವಾಟನ್ನು ನಡೆಸಿದೆ. ಈ ವರ್ಷ25,62,85,860 ರೂ. ಸಾಲ ನೀಡಿದ್ದು 29,60,77,128 ರೂ. ಠೇವಣಾತಿ ಹೊಂದಿದೆ.


ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಹಿತ ಎಲ್ಲಾ ಸಿಬ್ಬಂದಿಗಳು ಮಹಿಳೆಯರೇ ಆಗಿದ್ದು, ಮಹಿಳೆಯರ ಉದ್ಯೋಗ ಹಾಗೂ ಸ್ವಾವಲಂಬಿ ಬದುಕಿಗೆ ನಮ್ಮ ಸಂಘವು ಅವಕಾಶ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳನ್ನು ಆರಂಭಿಸಿ ಹೆಚ್ಚಿನ ಮಹಿಳೆಯರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದು. ನಮ್ಮ ಸಂಘದ ಪ್ರಧಾನ ಕಚೇರಿಗೆ ಸ್ವಂತ ಕಟ್ಟಡವನ್ನು ಹೊಂದುವ ಉದ್ದೇಶದಿಂದ ಸಜೀಪಮೂಡ ಗ್ರಾಮದ ಸುಭಾಷ್ ನಗರದಲ್ಲಿ 0.50 ಎಕ್ರೆ ಜಮೀನು ಖರೀದಿಸಲಾಗಿದ್ದು ಅದಷ್ಟು ಶೀಘ್ರ ಸ್ವಂತ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮುಂದಡಿ ಇಡಲಿದ್ದೇವೆ.


ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿ ಕೆ, ಸಂಜೀವ ಪೂಜಾರಿ, ಉಪಾಧ್ಯಕ್ಷರಾಗಿ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರಾಗಿ ರಮೇಶ್ ಅನ್ನಪ್ಪಾಡಿ, ವಿಠಲ ಬೆಳ್ಚಾಡ ಚೇಳೂರು, ಅಶೋಕ್ ಪೂಜಾರಿ ಕೋಮಾಲಿ, ಗಿರೀಶ್ ಕುಮಾರ್ ಪೆರ್ವ, ಜಯಶಂಕರ್ ಕಾನ್ಸಾಲೆ, ಶ್ರೀಮತಿ ಕೆ ಸುಜಾತ, ಶ್ರೀಮತಿ ವಾಣಿವಸಂತ, ಅರುಣ್ ಕುಮಾರ್ ಎಂ, ಆಶೀಶ್ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಮಮತಾ ಜಿ. ಸಂಘವನ್ನು ಮುನ್ನಡೆಸುತ್ತಿದ್ದಾರೆ.

ಸಂಘಟಕ ಕೆ. ಸಂಜೀವ ಪೂಜಾರಿ

ಸಂಘಟಕ ಕೆ. ಸಂಜೀವ ಪೂಜಾರಿ
ಸಾಮಾಜಿಕ ಕ್ಷೇತ್ರದಲ್ಲಿ ಬಹುಮುಖ ಸೇವಾಕರ್ತನಾಗಿ ಬೆಳೆದು ಬಂದಿರುವ ಕುಚ್ಚಿಗುಡ್ಡೆ ಸಂಜೀವ ಪೂಜಾರಿ ಅವರು ರಾಜಕಾರಣಿ, ಸಹಕಾರಿ, ಸಾಮಾಜಿಕ ಸೇವಾಕರ್ತ, `ಧಾರ್ಮಿಕ ಕ್ಷೇತ್ರದ ದಾನಿಯಾಗಿ, ಸಂಘಟಕರಾಗಿ ಗುರುತಿಸಿಕೊಂಡವರು.

ಒಂದು ಅವಧಿಯಲ್ಲಿ ತಾ.ಪಂ. ಸದಸ್ಯರಾಗಿ, 20 ವರ್ಷಗಳ ಅವಧಿಯಲ್ಲಿ ಗ್ರಾ.ಪಂ. ಸದಸ್ಯರಾಗಿ ಒಂದು ಅವಧಿಯಲ್ಲಿ ಅಧ್ಯಕ್ಷರಾಗಿ ಅಭಿವೃದ್ದಿ ಬ್ಯಾಂಕ್‌ನಲ್ಲಿ ಎರಡು ಅವಧಿಯಲ್ಲಿ ಉಪಾಧ್ಯಕ್ಷರಾಗಿ ,ಮೂರ್ತೆದಾರರ ಮಹಾಮಂಡಲದ ಎರಡು ಅವಧಿಯಲ್ಲಿ ಅಧ್ಯಕ್ಷರಾಗಿ ನಿರಂತರ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದವರು.
ಸಹಕಾರಿಯಲ್ಲಿ ಕಳೆದ 17 ವರ್ಷಗಳಿಂದ ಬ್ಯಾಂಕಿಂಗ್ ವ್ಯವಹಾರ ಆರಂಭಿಸಿ ಅದರ ಎಲ್ಲಾ ಬೆಳವಣಿಗೆಯ ಸೂತ್ರದಾರಿಯಾಗಿ ಕೆಲಸ ಮಾಡಿದ್ದಾರೆ.
ಮೂರ್ತೆದಾರರ ಸೇವಾ ಸಹಕಾರಿ ಸಂಘವು ಗರಿಷ್ಟ ಪ್ರಮಾಣದ ಡಿವಿಡೆಂಡ್ ಹಂಚಿಕೆಯಲ್ಲಿ ಜಿಲ್ಲೆಯ ಮುಂಚೂಣಿ ಸಹಕಾರಿಯಾಗಿದೆ.


ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷರಾಗಿ, ಶ್ರೀ ಗುರು ಕೋ-ಅಪರೇಟಿವ್ ಸೊಸೈಟಿ ನಿರ್ದೇಶಕರಾಗಿ, ಗೆಜ್ಜೆಗಿರಿ ನಂದನಬಿತ್ತಿಲ್ ಶ್ರೀ ಕೋಟಿ ಚೆನ್ನಯ ದೇಯಿಬೈದೆತಿ ಮೂಲಸ್ಥಾನದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ನಮ್ಮ ಬಿರುವೆರ್ ಒಕ್ಕೂಟದ ಗೌರವ ಅಧ್ಯಕ್ಷರಾಗಿ, ಸುರಭಿ ಬೀಡಿ ಮಾಲಕರಾಗಿ, ಮೆಲ್ಕಾರ್, ಉಪ್ಪಿನಂಗಡಿ, ಪುತ್ತೂರುಗಳಲ್ಲಿ ಬಿರ್ವ ಸೆಂಟರ್ ಬಾರ್ ಎಂಡ್ ರೆಸ್ಟೋರೆಂಟ್ ವ್ಯವಹಾರವನ್ನು ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here