ನಿನ್ನಿಕಲ್ಲಿನಲ್ಲಿ ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಯುವತಿ ಪತ್ತೆಯಾದ ವಿಚಾರ:ವಿಟ್ಲ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲು

0

ವಿಟ್ಲ: ಇಡ್ಕಿದು ಗ್ರಾಮದ ನಿನ್ನಿಕಲ್ಲು ಎಂಬಲ್ಲಿ ಅನ್ಯ ಕೋಮಿನ ಇಬ್ಬರು ಯುವಕರು ಹಾಗೂ ಯುವತಿಯೊಂದಿಗೆ ಇದ್ದ ಹಿಂದೂ ಯುವತಿಯ ಸಹಿತ ನಾಲ್ವರನ್ನು ವಿಟ್ಲ ಠಾಣಾ ಪೊಲೀಸರು ವಶಕ್ಕೆ ಪಡೆದ ಘಟನೆ ನ.20ರಂದು ನಡೆದಿದೆ. ಹಿಂದೂ ಯುವತಿಯ ಪೋಷಕರು ನೀಡಿದ ದೂರಿನಂತೆ ಅನ್ಯಕೋಮಿನ ಅಪ್ರಾಪ್ತ ಬಾಲಕನ ಸಹಿತ ಇಬ್ಬರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.


ಕಬಕ ಪರಿಸರದ ಇಬ್ಬರು ಮುಸ್ಲಿಂ ಯುವಕರೊಂದಿಗೆ ಅದೇ ಪರಿಸರದ ಮುಸ್ಲಿಂ ಯುವತಿ ಹಾಗೂ ಓರ್ವ ಹಿಂದೂ ಯುವತಿ ಇಡ್ಕಿದು ಗ್ರಾಮದ ಅಳಕೆಮಜಲು ಸಮೀಪದ ನಿನ್ನಿಕಲ್ಲಿನಲ್ಲಿರುವ ಪಾರ್ಕ್‌ಗೆ ಬಂದಿದ್ದರು. ಇದನ್ನು ಗಮನಿಸಿದ ಸ್ಥಳೀಯರು ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಠಾಣಾ ಸಿಬ್ಬಂದಿಗಳು ನಾಲ್ವರನ್ನೂ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು. ಆ ಬಳಿಕದ ಬೆಳವಣಿಗೆಯಲ್ಲಿ ಹಿಂದೂ ಯುವತಿಯ ಪೋಷಕರು ನೀಡಿದ ದೂರಿನಂತೆ ಅಪ್ರಾಪ್ತ ಮುಸ್ಲಿಂ ಬಾಲಕ ಹಾಗೂ ಮಹಮ್ಮದ್ ಶಾಕೀರ್ ಎಂಬಾತನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.


ಹಿಂದೂ ಯುವತಿಯ ಪೋಷಕರು ನೀಡಿದ ದೂರಿನಲ್ಲೇನಿದೆ:

ನನ್ನ ಅಪ್ರಾಪ್ತ ವಯಸ್ಸಿನ ಮಗಳು ನ.20ರಂದು ಕಬಕ ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ಸರಕಾರದ ವತಿಯಿಂದ ನಡೆಸುವ ಕಂಪ್ಯೂಟರ್ ಶಿಕ್ಷಣ ಪಡೆಯಲು ತೆರಳಿದ್ದಳು. ಅಲ್ಲಿಂದ ಆಕೆಯನ್ನು ಮಹಮ್ಮದ್ ಶಾಕೀರ್ ಹಾಗೂ ಇನ್ನೊಬ್ಬ ಅಪ್ರಾಪ್ತ ಬಾಲಕ ಪುಸಲಾಯಿಸಿ ಅಪಹರಣ ಮಾಡಿ ಇಡ್ಕಿದು ಗ್ರಾಮದ ನಿನ್ನಿಕಲ್ಲು ಎಂಬಲ್ಲಿಗೆ ಯಾವುದೋ ಉದ್ದೇಶದಿಂದ ಕರೆದುಕೊಂಡು ಹೋಗಿದ್ದರು. ಸಾಯಂಕಾಲ 5.30 ರ ಸುಮಾರಿಗೆ ನನ್ನ ಮಗಳು ಮನೆಗೆ ಕರೆ ಮಾಡಿ ನನ್ನನ್ನು ಅಪಹರಣ ಮಾಡಿ ನಿನ್ನಿಕಲ್ಲು ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಳು. ಆಕೆ ನೀಡಿದ ಮಾಹಿತಿಯಂತೆ ನಾನು ನಿನ್ನಿಕಲ್ಲು ಎಂಬಲ್ಲಿನ ಎತ್ತರದ ಗುಡ್ಡ ಪ್ರದೇಶದ ಕಡೆಗೆ ಹೋಗಿ ನೋಡಿದಾಗ ಅಲ್ಲಿ ಇಬ್ಬರು ಹುಡುಗರು ನನ್ನ ಮಗಳೊಂದಿಗೆ ಇರುವುದನ್ನು ಗಮನಿಸಿ ಆಕೆಯನ್ನು ಕರೆದಾಗ ಅಲ್ಲಿದ್ದ ಇಬ್ಬರು ಯುವಕರು ಓಡಿ ಪರಾರಿಯಾಗಿದ್ದಾರೆ ಎಂದು ಬಾಲಕಿಯ ಪೋಷಕರು ವಿಟ್ಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here