ಬಂಟ್ವಾಳ: ಆ 27ರಿಂದ 29 ಭಾರತ ಕಮ್ಯೂನಿಸ್ಟ್ ಪಕ್ಷದ (ಸಿಪಿಐ) 24ನೇ ಸಮ್ಮೇಳನ

0

ಬಂಟ್ವಾಳ: ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ವತಿಯಿಂದ , ಬಂಟ್ವಾಳ ಎ.ಶಾಂತರಾಮ ಪೈ ಸ್ಮಾರಕ ಸಭಾಂಗಣದಲ್ಲಿ ಇದೇ 27ರಿಂದ 29ರತನಕ ಜಿಲ್ಲಾ ಮಟ್ಟದ 24ನೇ ಸಮ್ಮೇಳನ ಆಯೋಜಿಸಲಾಗಿದ್ದು, 29ರಂದು ಬಿ.ಸಿ.ರೋಡು ಗಾಣದಪಡ್ಪು ಸಭಾಂಗಣದಲ್ಲಿ ಬಹಿರಂಗ ರ‍್ಯಾಲಿ ನಡೆಯಲಿದೆ ಎಂದು ಸಿಪಿಐ ಕಾರ್ಯದರ್ಶಿ ಬಿ.ಶೇಖರ್ ತಿಳಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 28ರಂದು ಬೈಕ್ ರ‍್ಯಾಲಿ ಮತ್ತು 29ರಂದು ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕರ್ಷಕ ಮೆರವಣಿಗೆ ನಡೆಯಲಿದೆ ಎಂದರು.
29ರಂದು ನಡೆಯುವ ಬಹಿರಂಗ ರ‍್ಯಾಲಿಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯಸಭಾ ಸದಸ್ಯ ಸಂದೋಷ್ ಕುಮಾರ್ ಕಣ್ಣೂರು ರ‍್ಯಾಲಿ ಉದ್ಘಾಟಿಸುವರು. ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ರಾಷ್ಟ್ರೀಯ ಮಂಡಳಿ ಮಾಜಿ ಸದಸ್ಯ ಡಾ.ಸಿದ್ಧನಗೌಡ ಪಾಟೀಲ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.
ಕಳೆದ 1925ರಲ್ಲಿ ಆರಂಭಗೊಂಡ ಸಿಪಿಐ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಸ್ವಾತಂತ್ರೋತ್ತರ ಸಹಿತ ಒಟ್ಟು 97 ವರ್ಷಗಳಲ್ಲಿ ಭಾರತೀಯರ ಸ್ವಾಭಿಮಾನದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದೆ. ಭೂಸುಧಾರಣೆ ಕಾನೂನು ಜಾರಿ ಮತ್ತು ಉಳುವವನೇ ಹೊಲದೊಡೆಯ ಮಾಡಲು ಶ್ರಮಿಸಿದ ಪಕ್ಷವು ಪ್ರಸಕ್ತ ಕೃಷಿಕರು, ಅಸಂಘಟಿತ ಕಾರ್ಮಿಕರು ಮತ್ತು ಮಹಿಳೆಯರಿಗೆ ಉದ್ಯೋಗ ಮತ್ತು ಜೀವನ ಭದ್ರತೆ ಒದಗಿಸಲು ಹೋರಾಟ ಮುಂದುವರಿಸಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಸಹ ಕಾರ್ಯದರ್ಶಿ ವಿ.ಎಸ್.ಬೇರಿಂಜ, ಎಂ.ಕರುಣಾಕರ್, ಸುರೇಶ್ ಕುಮಾರ್ ಬಂಟ್ವಾಳ್, ಕೃಷ್ಣಪ್ಪ ವಾಮಂಜೂರು ಇದ್ದರು.

LEAVE A REPLY

Please enter your comment!
Please enter your name here