ಕುದ್ಕೋಳಿ: ಬಸ್ಸಿನಲ್ಲಿ ಯುವತಿಗೆ ಕಿರುಕುಳ ಆರೋಪ :ಕಾರ್ಮಿಕನಿಗೆ ಮೂವರಿಂದ ಹಲ್ಲೆ, ಗಾಯಾಳು ಆಸ್ಪತ್ರೆಗೆ ದಾಖಲು

0


ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಕುದ್ಕೋಳಿ ಎಂಬಲ್ಲಿ ಬಿ.ಸಿ.ರೋಡಿನಿಂದ ಮೂಡುಬಿದ್ರೆಗೆ ಹೋಗುತ್ತಿದ್ದ ಖಾಸಗಿ ಬಸ್ಸಿನಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಗಾರೆ ಕೆಲಸದ ಕಾರ್ಮಿಕರೊಬ್ಬರಿಗೆ ಮೂವರು ಅಪರಿಚಿತ ವ್ಯಕ್ತಿಗಳು ಸೇರಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ಗಾಯಾಳು ಬಿ.ಸಿ.ರೋಡು ತಲಪಾಡಿ ನಿವಾಸಿ ಕುಂಞುಮೋನು ಎಂಬವರ ಪುತ್ರ ಇಸಾಕ್ (43) ಇವರು ಬುಧವಾರ ಬೆಳಿಗ್ಗೆ ಬಿ.ಸಿ.ರೋಡಿನಿಂದ ಮೂಡುಬಿದ್ರೆ ಗಂಟಾಲ್ ಕಟ್ಟೆ ಎಂಬಲ್ಲಿಗೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಈ ಬಸ್ಸಿನಲ್ಲಿ ಕಳೆದ ಎರಡು ದಿನಗಳಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದ ಇಸಾಕ್ ಗೆ ವಿದ್ಯಾರ್ಥಿನಿಯೊಬ್ಬರು ಬ್ಯಾಗ್ ಹಿಡಿದುಕೊಳ್ಳಲು ನೀಡಿದ್ದರು. ಇದನ್ನು ಪ್ರಶ್ನಿಸಿ ಬಸ್ಸಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಅವಾಚ್ಯ ಶಬ್ಧಗಳಿಂದ ಬೈದು ನಿಂದಿಸಿ, ಹುಡುಗಿಯರಿಗೆ ಭಾರೀ ತೊಂದರೆ ಕೊಡುತ್ತೀಯಾ ಎಂದು ಪ್ರಶ್ನಿಸಿ ಬಸ್ಸಿನಿಂದ ಕೆಳಗೆ ಇಳಿಸಿದ್ದಾರೆ. ಇದೇ ವೇಳೆ ಇತರ ಮೂವರೊಂದಿಗೆ ರಿಕ್ಷಾದಲ್ಲಿ ರಾಯಿ ಸಮೀಪದ ಮರದಡಿ ಕರೆದುಕೊಂಡು ಹೋಗಿ ಕೋಲಿನಿಂದ ದೇಹವಿಡೀ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಗಾಯಾಳು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here