ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ- ರೂ.270 ಕೋಟಿ ವ್ಯವಹಾರ ರೂ.92.60 ಲಕ್ಷ ಲಾಭ

0

ಬಿ.ಸಿ. ರೋಡ್ : ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘವು 2022-23 ನೇ ಸಾಲಿನಲ್ಲಿ ರೂ. 270 ಕೋಟಿ ವ್ಯವಹಾರ ನಡೆಸಿ ರೂ.92.60 ಲಕ್ಷ ನಿವ್ವಳ ಲಾಭ ಪಡೆದಿದೆ. ಶೇ. 13 ಡಿವಿಡೆಂಡ್ ನೀಡುವುದು ಎಂದು ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಹೇಳಿದ್ದಾರೆ.


ಅವರು ಎ.10ರಂದು ಬಿ.ಸಿ.ರೋಡ್ ಸ್ಪರ್ಶಾ ಕಲಾ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿವರ ನೀಡಿದರು.
ಸಂಸ್ಥೆಯು 2003 ಆಗಸ್ಟ್ ತಿಂಗಳಲ್ಲಿ ಬಂಟ್ವಾಳ ನಗರದ ಬೈಪಾಸ್ ಪ್ರದೇಶದ ಚಿಕ್ಕ ಪುಟ್ಟ ವ್ಯಾಪಾರ ವಹಿವಾಟು ಮಾಡುತ್ತಿದ್ದ, ಸಮಾನ ಮನಸ್ಕ 460 ಜನ ಸದಸ್ಯರಿಂದ ರೂ. 4.02 ಲಕ್ಷ ಪಾಲು ಬಂಡವಾಳ 2 ಲಕ್ಷ ಠೇವಣಿಯೊಂದಿಗೆ ಆರಂಭವಾಗಿತ್ತು.
ಸಹಕಾರಿ ಕ್ಷೇತ್ರದಲ್ಲಿ ವಿವಿಧ ಉದ್ದೇಶಗಳನ್ನಿಟ್ಟುಕೊಂಡು ಚಿಕ್ಕ ಮಟ್ಟದಲ್ಲಿ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಸಂಸ್ಥೆಯು ಪ್ರಸ್ತುತ 20ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ.
ಕಳೆದ ವರ್ಷ ಸಹಕಾರಿಯು ಜಿಲ್ಲಾ ಮಟ್ಟಕ್ಕೆ ವ್ಯವಹಾರವನ್ನು ವಿಸ್ತರಿಸಿಕೊಂಡಿದ್ದು ಮೂಡಬಿದಿರೆ ತಾಲೂಕಿನ ಅಲಂಗಾರು ಹಾಗೂ ಬೆಳ್ತಂಗಡಿ ತಾಲೂಕಿನ ಕಲ್ಲೇರಿಯಲ್ಲಿ ಶಾಖೆಗಳನ್ನು ತೆರೆದಿದೆ.
ಸಹಕಾರಿಯು ಒಟ್ಟು 12 ಶಾಖೆಗಳನ್ನು ಹೊಂದಿದೆ. ಅದರಲ್ಲಿ 10 ಶಾಖೆಗಳು ಬಂಟ್ವಾಳ ತಾಲೂಕಿನಲ್ಲಿದೆ. ಮುಂದಿನ ಮೇ ತಿಂಗಳಲ್ಲಿ ಬಂಟ್ವಾಳ ತಾಲೂಕಿನ ಪೆರ್ನೆಯಲ್ಲಿ 13ನೇ ಶಾಖೆ ತೆರೆಯಲು ಇಲಾಖಾ ಅನುಮತಿ ಪಡೆದಿದೆ.
ಸಹಕಾರಿಯಲ್ಲಿ ಒಟ್ಟು 5978 ಸದಸ್ಯರಿದ್ದು, 20 ಸಾವಿರಕ್ಕಿಂತಲೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ರೂ.1.45 ಕೋಟಿ ಪಾಲು ಬಂಡವಾಳ, ರೂ. 1.98 ಕೋಟಿ ಕ್ಷೇಮ ನಿಧಿ, ಕಟ್ಟಡ ನಿಧಿ ಹಾಗೂ ಇತರ ನಿಧಿಗಳೊಂದಿಗೆ, ರೂ. 52.54 ಕೋಟಿ ಠೇವಣಿ, ರೂ. 55.00 ಕೋಟಿಯಷ್ಟು ದುಡಿಯುವ ಬಂಡವಾಳವನ್ನು ಹೊಂದಿರುತ್ತದೆ.
2023 ಮಾ. 31ಕ್ಕೆ ಸಂಸ್ಥೆಯ ಸದಸ್ಯರಿಗೆ ನೀಡಿರುವ ಹೊರಬಾಕಿ ಸಾಲದ ಬಾಬ್ತು ರೂ. 47.73 ಕೋಟಿಯಷ್ಟು ಇದ್ದು ಅದರಲ್ಲಿ ಆಭರಣ ಸಾಲ, ಆಸ್ತಿ ಅಡಮಾನ ಸಾಲ ಹಾಗೂ ಇನ್ನಿತರ ಭದ್ರತಾ ಸಾಲಗಳಿವೆ.
ಸಹಕಾರಿಯ ಮಾವಿನಕಟ್ಟೆ ಹಾಗೂ ಬೆಂಜನಪದವು ಶಾಖೆಗಳು ಸುಮಾರು 50 ಲಕ್ಷ ಮೌಲ್ಯದ ಸ್ವಂತ ಕಟ್ಟಡವನ್ನು ಹೊಂದಿದೆ. ರೂ. 85.95 ಲಕ್ಷದಷ್ಟು ಕ್ಷೇಮ ನಿಽಯನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಖಾಯಂ ಠೇವಣಿಯಾಗಿ ಇರಿಸಲಾಗಿದೆ.
ಕೇಂದ್ರ ಕಚೇರಿಗೆ ಸ್ವಂತ ಕಟ್ಟಡ ಹೊಂದಲು ಜಮೀನು ಖರೀದಿ ಮಾಡಿದೆ. ರೂ. 60 ಲಕ್ಷ ಕಟ್ಟಡ ನಿಧಿ ಹೊಂದಿದೆ ಎಂದರು.
ಸಂಸ್ಥೆಗೆ 20 ವರ್ಷ ತುಂಬುತ್ತಿರುವುದರಿಂದ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಸಾಧಕರನ್ನು ಗುರುತಿಸುವುದು, ವಿವಿಧ ಸ್ಪರ್ಧೆಗಳನ್ನು ಆಯೋಜಿಸುವುದು, ಸಹಕಾರಿ ಕ್ಷೇತ್ರದ ಸಿಬ್ಬಂದಿಗಳಿಗೆ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಇರಾದೆ ಇದೆ.
ಮುಂದಿನ ಡಿಸೆಂಬರ್ ತಿಂಗಳಲ್ಲಿ ವಿಂಶತಿ ಸಂಭ್ರಮದ, ಅವಿಸ್ಮರಣೀಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
2023 ಸೆ. ತಿಂಗಳಲ್ಲಿ ಈ ಆಡಳಿತ ಸಮಿತಿಯ ಐದು ವರ್ಷ ಅವಧಿ ಮುಕ್ತಾಯ ಆಗಲಿದ್ದು ಹೊಸ ಸಮಿತಿ ಆಯ್ಕೆಯಾಗುವುದು ಎಂದರು.
ಸಂಸ್ಥೆಯ ಆರ್ಥಿಕ ವ್ಯವಹಾರಗಳ ನಿರ್ವಹಣೆಗಾಗಿ, ಮುಖ್ಯಕಾರ್ಯನಿರ್ವಹಣಾಽಕಾರಿ ಸಹಿತ 24 ಜನ ಖಾಯಂ ಸಿಬ್ಬಂದಿಗಳು, 14 ಜನ ಗುತ್ತಿಗೆ ಆಧಾರದ ಸಿಬ್ಬಂದಿ, 15 ಜನ ಪಿಗ್ಮಿ ಸಂಗ್ರಾಹಕರು ಉತ್ತಮ ಕಾರ್ಯಕ್ಷಮತೆಯೊಂದಿಗೆ ದುಡಿಯುತ್ತಿದ್ದಾರೆ ಎಂದು ವಿವರಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಮಂಜುನಾಥ ರೈ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ಜೈನ್, ನಿರ್ದೇಶಕರುಗಳಾದ ಸ್ವಪ್ನರಾಜ್, ರಾಜೇಶ್ ಬಿ., ಜೆ. ಗಜೇಂದ್ರ ಪ್ರಭು, ದಿವಾಕರ ದಾಸ್, ವಿಜಯ ಕುಮಾರಿ ಇಂದ್ರ, ಸುಧಾಕರ ಸಾಲ್ಯಾನ್, ಮೈಕಲ್ ಡಿ’ಕೋಸ್ತಾ, ಹೇಮಂತ್ ಕುಮಾರ್ ಜೈನ್, ರವೀಂದ್ರ, ನಾರಾಯಣ ಸಿ. ಪೆರ್ನೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here